ಡಿಜೆ ಸಂಸ್ಕೃತಿ ಹತ್ತಿಕ್ಕಲು ಯಕ್ಷಗಾನ ಸ್ಪರ್ಧೆ ಪೂರಕ: ಪಾಲೆಮಾರ್
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಡಿಸೆ೦ಬರ್ 31 , 2014
|
ಡಿಸೆ೦ಬರ್ 31, 2014
|
ಡಿಜೆ ಸಂಸ್ಕೃತಿ ಹತ್ತಿಕ್ಕಲು ಯಕ್ಷಗಾನ ಸ್ಪರ್ಧೆ ಪೂರಕ: ಪಾಲೆಮಾರ್
ಮೂಲ್ಕಿ :
ಸಾಮಾಜಿಕವಾಗಿ ಹಾನಿಕಾರವಾಗಿರುವ ಡಿಜೆ ಸಂಸ್ಕೃತಿಯನ್ನು ಹತ್ತಿಕ್ಕಲು ಕಾಲೇಜು ಮಟ್ಟದಲ್ಲಿ ಯಕ್ಷಗಾನ ಸ್ಪರ್ಧೆ ಹಮ್ಮಿಕೊಂಡಿರುವುದು ಅನುಕರಣೀಯವಾಗಿದೆ ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಹೇಳಿದರು.
ಮೂಲ್ಕಿ ವಿಜಯ ಕಾಲೇಜು, ಲಯನ್ಸ್ ಕ್ಲಬ್, ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ವಿಜಯ ಕಾಲೇಜನಲ್ಲಿ ಮಂಗಳವಾರ ಆರಂಭಗೊಂಡ ಮಂಗಳೂರು ವಿವಿ ಮಟ್ಟದ ತೆಂಕು ತಿಟ್ಟಿನ ಯಕ್ಷಗಾನ ಸ್ಪರ್ಧೆ 'ಯಕ್ಷ ವಿಜಯ ಕೇಸರಿ -2014' ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಜಾನಪದ ಯಕ್ಷಗಾನ ಕಲೆ ಉಳಿಸಿ ಬೆಳೆಸಲು ವಿದ್ಯಾರ್ಥಿಗಳ ಪ್ರಯತ್ನ ಅತಿ ಮುಖ್ಯ ಎಂದ ಪಾಲೆಮಾರ್, ಜಾನಪದ ಕ್ರೀಡೆ ಕಂಬಳ ನಿಷೇಧ ಸಲ್ಲದು. ಮಠ ಮಂದಿಗಳ ನಿಯಂತ್ರಣ ಆಕ್ಷೇಪಾರ್ಹಎಂದರು.
ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮೊಕ್ತೇಸರ ವೇ.ಮೂ.ವಾಸುದೇವ ಅಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು.
ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಾಲೇಜು ವಿಶ್ವಸ್ಥ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಿನ್ನಿಗೋಳಿ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಪ.ಪೂ.ಕಾಲೇಜು ಪ್ರಿನ್ಸಿಪಾಲ್ ಪಮೀದಾ ಬೇಗಂ, ಯಕ್ಷಗಾನ ಸಮಿತಿ ಹಾಗೂ ಲಯನ್ಸ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕಾಲೇಜು ಯಕ್ಷಗಾನ ಸಮಿತಿ ಕಾರ್ಯದರ್ಶಿ ರಜನೀಶ್ ಭಟ್ ಮುಖ್ಯ ಅತಿಥಿಗಳಾಗಿದ್ದರು.
ಕಾಲೇಜು ಪ್ರಿನ್ಸಿಪಾಲ್ ಪ್ರೊ.ಕೆ. ಶಂಕರ್ ಸ್ವಾಗತಿಸಿದರು. ವೈಸ್ ಪ್ರಿನ್ಸಿಪಾಲ್ ಪ್ರೊ. ನಾರಾಯಣ್ ವಂದಿಸಿದರು. ಕಿರಣ್ ಕಾರ್ಯಕ್ರಮ ನಿರ್ವಹಿಸಿದರು.
2 ದಿನಗಳ ಕಾಲ ನಡೆಯುವ ಸ್ಪರ್ಧೆಯಲ್ಲಿ ಮಂಗಳವಾರ ಕಾರ್ಕಳ ಭುವನೇಂದ್ರ ಕಾಲೇಜು(ಪ್ರಸಂಗ -ಕುಮಾರ ವಿಜಯ), ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜು(ರತ್ನಾವತಿ ಕಲ್ಯಾಣ), ಮಂಗಳೂರು ಎಸ್ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್(ಜಾಂಬವತಿ ಕಲ್ಯಾಣ), ಬುಧವಾರದಂದು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು(ನರಕಾಸುರ ವಧೆ), ಮೂಡಬಿದಿರೆ ಆಳ್ವಾಸ್ ಕಾಲೇಜು(ಸುದರ್ಶನ ವಧೆ), ಉಜಿರೆ ಎಸ್ಡಿಎಂ ಕಾಲೇಜು(ನೀಲಧ್ವಜ ಕಾಳಗ), ಸುರತ್ಕಲ್ ಜಿಡಿಸಿ ಕಾಲೇಜು(ಸುಧನ್ವಾರ್ಜುನ), ಪ್ರಸಂಗ ನಡೆಯಲಿದೆ.
ಕೃಪೆ :
http://vijaykarnataka.com
|
|
|